ಹೀಗೂ ಇದ್ದಾರೆ ಕೆಲ ನೀಚರು: ತಿನ್ನುವ ಹಣ್ಣೊಳಗೆ ಸ್ಫೋಟಕಗಳನ್ನಿಟ್ಟು ಗರ್ಭಿಣಿ ಆನೆಯನ್ನು ಹತ್ಯೆಗೈದರು

ಮಲಪ್ಪುರಂ, ಜೂ‌. 3 – ಮನುಷ್ಯ ಮನುಷ್ಯನನ್ನು ಕಂಡರೆ ದ್ವೇಷಿಸುವುದು, ಹಗೆ ಸಾಧಿಸುವುದು ಕಡೆಗೆ ಹತ್ಯೆಗೈಯುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಮೂಕ ಪ್ರಾಣಿಯೊಂದನ್ನು ಅದರಲ್ಲೂ ಗರ್ಭಿಣಿ ಹೆಣ್ಣು ಆನೆಯೊಂದನ್ನು ಅತ್ಯಂತ ದಾರುಣವಾಗಿ, ಒಂದಿಷ್ಟೂ ಕನಿಕರವಿಲ್ಲದೆ ಅದರ ಬಾಯಿಗೆ ಸ್ಫೋಟಕಗಳನ್ನು ತುಂಬಿದ ಹಣ್ಣುಗಳನ್ನು ಕೊಟ್ಟು ಸ್ಫೋಟಿಸಿ ಭೀಕರವಾಗಿ ಅದನ್ನು ಹತ್ಯಗೈದಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ.
ಅರಣ್ಯ ಪ್ರದೇಶದಿಂದ ಗರ್ಭಿಣಿ ಹೆಣ್ಣಾನೆಯೊಂದು ಆಹಾರ ಅರಸಿ ಉತ್ತರ ಕೇರಳದ ಕೊಲ್ಲಂ ಜಿಲ್ಲೆಯ ಹಳ್ಳಿಯೊಂದರತ್ತ ಬಂದಿದೆ‌ ಇದನ್ನು ಗಮನಿಸಿದ ಕಿಡಿಗೇಡಿಗಳು ಹಾಗೂ ನೀಚರು ಅದೆಲ್ಲಿಂದ ಸ್ಫೋಟಕಗಳನ್ನು ತಂದರೋ ಗೊತ್ತಿಲ್ಲ‌. ಅವುಗಳನ್ನು ದೊಡ್ಡ ದೊಡ್ಡ ಪೈನಾಪಲ್ ಹಣ್ಣುಗಳ ತುರುಕಿಸಿ ಇಟ್ಟು ಅದನ್ನು ಹಸಿದ ಆನೆಗೆ ನೀಡಿದ್ದಾರೆ. ಹಣ್ಣುಗಳನ್ನು ತಿನ್ನುತ್ತಲೇ ಸ್ಫೋಟಕಗಳು ಸ್ಪೋಟಿಸಿ ಆನೆಯ ಬಾಯಿ ಛಿಧ್ರ ಛಿಧ್ರವಾಗಿ ಅದು ದಾರುಣವಾಗಿ ಅಸು ನೀಗಿದೆ‌ ಗಾಯದ ನೋವು ಹಾಗೂ ಸ್ಪೋಟ ಗೊಂಡ ಸದ್ದಿಗೆ ಬೆದರಿ ಹೋಗಿದ್ದ ಈ ಆನೆ ಸಂಕಟದಿಂದಲೇ ಹಳ್ಳಿಯ ಸುತ್ತ ಸುತ್ತಿ ನಂತರ ಸಮೀಪದ ನದಿಯ ಬಳಿ ಬಂದಿದೆ. ಈ ಕರುಳು ಹಿಂಡುವ ದೃಶ್ಯವನ್ನು ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಎಂಬವರು ಫೋಟೋಗಳ ಸಹಿತ ಸಾಮಾಜಿಕ ಜಾಲಾತಾಣಗಳಲ್ಲಿ ಆಕ್ರೋಶಗೊಂಡು ಪ್ರಕಟಿಸಿದ್ದಾರೆ.

ಇನ್ನು ಇಪ್ಪತ್ತೇ ದಿನಗಳಲ್ಲಿ ಮರಿ ಆನೆಗೆ ಅದು ಜನ್ಮ ನೀಡುವುದರಲ್ಲಿತ್ತು‌. ಈವರೆಗೂ ಅದು ಹಳ್ಳಿಗಳ ಸಮೀಪ ಸುಳಿಯುತ್ತಿತ್ತಾದರೂ ಯಾವುದೇ ಪ್ರಾಣ ಹಾನಿಯನ್ನು ಮಾಡಿರಲಿಲ್ಲ. ಮನೆಗಳಿಗೆ ಅಥವಾ ಬೆಳೆಗಳನ್ನೂ ನಾಶ ಮಾಡಿರಲಿಲ್ಲ. ಆದರೂ ಈ ಕ್ರೂರಿಗಳು ಇಷ್ಟೊಂದು ಬರ್ಬರ ರೀತಿಯಲ್ಲಿ ಆನೆಯನ್ನು ಸ್ಫೋಟಕಗಳನ್ನು ಬಳಸಿ ಹತ್ಯೆಗೈದಿರುವುದು ತಮಗೆ ಹಾಗೂ ತಮ್ಮಂತಹ ಪ್ರಾಣಿ ಪ್ರಿಯರಿಗೆ ತೀವ್ರ ನೋವುಂಟು ಮಾಡಿದೆ ಎಂದು ನೊಂದು ನುಡಿದಿದ್ದಾರೆ ಅವರು.

ಸ್ಪೋಟಕಗಳು ಸಿಡಿದ ಬಳಿಕವೂ ಅದು ಕೆಲ ಸಮಯ ಒದ್ದಾಡಿದೆ. ಗಾಯಕ್ಕೆ ನೊಣಗಳು ಹಾಗೂ ಹುಳುಗಳು ಬಾರದಿರಲಿ ಎಂಬ ಕಾರಣಕ್ಕೆ ತನ್ನ ಬಾಯಿ ಹಾಗೂ ಬಾಯಿಉರಿಯಿಂದ ರಕ್ಷಿಸಿಕೊಳ್ಳಲು ಅದು ನೀರಿನಲ್ಲಿ ಮುಳುಗಿಸಿ ಇಟ್ಟಿತ್ತು‌ ದುರಾದೃಷ್ಟವಶಾತ್ ಅದು ಬದುಕುಳಿಯಲಿಲ್ಲ‌ ನಿಂತ ರೀತಿಯಲ್ಲಿಯೇ ಅದು ಮರಣ ಹೊಂದಿದೆ. ಈ ದೃಶ್ಯ ಕುರುಳು ಹಿಂಡಿ ಬರುತ್ತದೆ.

ಕಡೆಗೆ ಇನ್ನೆರಡು ಆನೆಗಳನ್ನು ಕರೆತಂದು ನೀರಿನಲ್ಲಿದ್ದ ಮೃತ ಆನೆಯನ್ನು ಹೊರಗೆ ತರಲಾಗಿದೆ‌.

ಈ ಕುಕೃತ್ಯಕ್ಕೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದ್ದು ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯದ ಕೂಗು ಕೇಳಿ ಬರುತ್ತಿದೆ.
ಅರಣ್ಯ ಹಾಗೂ ಪೊಲೀಸ್ ಇಲಾಖೆ ಆನೆಯನ್ನು ಹತ್ಯೆಗೈದಿರುವ ನೀಚರಿಗಾಗಿ ಹುಡುಕಾಟ ನಡೆಸಿದೆ.

Leave a Reply

Your email address will not be published. Required fields are marked *