ರಕ್ತದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದ ಕ್ರೀಡಾಪಟು ವರ್ತಿಕಾಸಿಂಗ್; ನಿರ್ಭಯಾ ಅತ್ಯಾಚಾರಿಗಳನ್ನು ನಾನೇ ಗಲ್ಲಿಗೇರಿಸುತ್ತೇನೆ, ಅವಕಾಶ ಕೊಡಿ ಎಂದು ಮನವಿ
ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರನ್ನು ಗಲ್ಲಿಗೇರಿಸಲು ಈ ಕೆಲಸ ನಿರ್ವಹಿಸುವವರು ಇಲ್ಲ ಎಂದು ಮತ್ತು ಈ ಕೆಲಸಕ್ಕೆ ಇಬ್ಬರನ್ನು ತಿಹಾರ್ ಜೈಲಿಗೆ ಕಳುಹಿಸಿಕೊಡಬೇಕು ಎಂದು ಬಿಹಾರ್ ಜೈಲು ಅಧಿಕಾರಿಗಳಿಗೆ ಅಧಿಕೃತವಾಗಿ ತಿಹಾರ್ ಜೈಲಿನ ಅಧಿಕಾರಿಗಳು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಅಂತರಾಷ್ಟ್ರೀಯ ಕ್ರೀಡಾಪಟು ವರ್ತಿಕಾ ಸಿಂಗ್ ಕೇಂದ್ರ ಗೃಹಸಚಿವ ಅಮಿತ್ ಶಾಅವರಿಗೆ ರಕ್ತದಲ್ಲಿಪತ್ರ ಬರೆದು ಈ ಕೆಲಸವನ್ನು ನಿರ್ವಹಿಸಲು ನಾನು ಸಿದ್ಧಳಿದ್ದೇನೆ ಕೆಲಸಕ್ಕೆ ಅವಕಾಶ ಮಾಡಿಕೊಡಿ ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ನಿರ್ಭಯ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗುವ ನಾಲ್ವರು ಅತ್ಯಾಚಾರಿಗಳನ್ನುಶೀಘ್ರದಲ್ಲೇ ನೇಣಿಗೇರಿಸಲು ಆಗುತ್ತದೆ ಎಂಬ ಸುದ್ದಿ ಇರುವುದರಿಂದ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ವರ್ತಿಕಾ ಸಿಂಗ್ , ಪುರುಷರು ಮಹಿಳೆ ಮೇಲೆ ಅತ್ಯಾಚಾರ ಎಸಗಿದರೆ ಮರಣದಂಡನೆ ಶಿಕ್ಷೆ ವಿಧಿಸಬಹುದೆಂಬ ಸಂದೇಶ ನೀಡಲು,ನಿರ್ಭಯ ಅತ್ಯಾಚಾರಿಗಳನ್ನು ತನ್ನ ಕೈಯಿಂದಲೇ ನೇಣಿಗೇರಿಸಬೇಕು ಈ ಕೆಲಸ ಪ್ರಾರಂಭಿಸಲು ನನಗೆ ನಟಿಯರು ಕಾನೂನು ತಜ್ಞರು ಮತ್ತು ಸೆಲೆಬ್ರಿಟಿಗಳ ಬೆಂಬಲ ಬೇಕು ಎಂದು ಹೇಳಿದರು.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿದೆ. ಸದ್ಯ ತಿಹಾರ್ ಜೈಲಿನಲ್ಲಿರುವ ಅಪರಾಧಿಗಳನ್ನು ನೇಣಿಗೇರಿಸಲು ಎಲ್ಲಾ ಸಿದ್ಧತೆಮಾಡಿಕೊಳ್ಳಲಾಗುತ್ತಿದೆ. ತಿಹಾರ್ ಜೈಲಿನ ಅಧಿಕಾರಿಗಳು ಬಿಹಾರದ ಬಾಕ್ಸರ್ ಜೈಲಿನ ಅಧಿಕಾರಿಗಳಿಗೆ ಅಪರಾಧಿಗಳನ್ನು ನೇಣಿಗೇರಿಸಲು ಹಗ್ಗಗಳನ್ನು ಸಿದ್ಧಮಾಡಿಕೊಳ್ಳುವಂತೆ ಹೇಳಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸರ್ಕಾರಕ್ಕೆ ನೇಣಿಗೇರಿಸುವ ಕೆಲಸದವರನ್ನು ಒದಗಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ..?
2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ತನ್ನ ಗೆಳೆಯನೊಂದಿಗೆ ಬಸ್ ನಲ್ಲಿಪ್ರಯಾಣಿಸುತ್ತಿದ್ದ 23ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ 6ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಇದನ್ನು ತಡೆಯಲು ಬಂದ ಸ್ನೇಹಿತರ ಮೇಲೂ ಹಲ್ಲೆ ನಡೆಸಿದ್ದರು. ಮೃಗೀಯವಾಗಿ ಅತ್ಯಾಚಾರವೆಸಗಿದ್ದ ಅಪರಾಧಿಗಳು ಯುವತಿಯನ್ನು ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆದಿದ್ದರು. ಈ ಘೋರ ಕೃತ್ಯದಿಂದ ಸಾವು – ಬದುಕಿನ ಹೋರಾಟ ನಡೆಸುತ್ತಿದ್ದ ನಿರ್ಭಯಿ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29ರಂದು ಸಿಂಗಾಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಆರು ಜನ ಆರೋಪಿಗಳಲ್ಲಿ ರಾಮ್ ಸಿಂಗ್ ಎಂಬಾತ 2013ರಲ್ಲಿ ಕೇಸ್ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ತಿಹಾರ್ ಜೈಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಬಾಲಾಪರಾಧಿ ಯಾಗಿದ್ದರಿಂದ 3 ವರ್ಷ ಶಿಕ್ಷೆ ನೀಡಿ, 2015ರಲ್ಲಿ ಬಿಡುಗಡೆಗೊಳಿಸಿದ್ದರು.
ಉಳಿದ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯವು 2013ರಲ್ಲಿ ತ್ವರಿತ ಗಲ್ಲುಶಿಕ್ಷೆ ವಿಧಿಸಿತ್ತು. ಬಳಿಕ 2014ರ ಮಾರ್ಚ್ ನಲ್ಲಿ ದೆಹಲಿ ಹೈಕೋರ್ಟ್ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಖಚಿತಪಡಿಸಿತು. 2017ರಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. 2018 ರ ಜುಲೈನಲ್ಲಿ ಮೂವರು ಆರೋಪಿಗಳು 2017ರ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಮರುಪರಿಶೀಲನಾ ಅರ್ಜಿಯ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ, ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿತ್ತು.