ಯುವತಿಯೊಬ್ಬಳು ದೇವಸ್ಥಾನಕ್ಕೆ ಹೋಗಿ ಬಂದಳು.. ದರ್ಶನ ಚೆನ್ನಾಗಿ ಆಯಿತಾ ಮಗಳೇ, ಎಂದು ತಂದೆ ಪ್ರಶ್ನಿಸಿದರು….

ಮಗಳು:ಇನ್ನು ಮುಂದೆ ನನ್ನನ್ನು ದೇವಸ್ಥಾನಕ್ಕೆ ಹೋಗು ಎಂದು ಹೇಳಬೇಡಿ.. ಕೋಪದಿಂದ ನುಡಿದಳು…

ತಂದೆ:ಏನು ನಡೆಯಿತು ಮಗಳೇ..

ಮಗಳು:
ದೇವಸ್ಥಾನದಲ್ಲಿ ಬಂದ ಒಬ್ಬರಿಗೂ ಭಕ್ತಿ ಇಲ್ಲ, ದೇವರ ಮೇಲೆ ಧ್ಯಾನವಂತೂ ಇಲ್ಲವೇ ಇಲ್ಲ . ಎಲ್ಲರೂ ಅವರವರ ಮೊಬೈಲ್ ಫೋನ್‌ಗಳಲ್ಲಿ ಮಾತನಾಡುವುದು ಹಾಗೂ ಫೋಟೋಗಳನ್ನು ತೆಗೆಯುವುದರಲ್ಲೇ ನಿರತರಾಗಿದ್ದರು.
ಭಕ್ತಿಗೆ ಸಂಬಂಧಿಸಿದ್ದನ್ನು ಬಿಟ್ಟು ಬೇರೆ ಸಂಗತಿಗಳನ್ನು ಚರ್ಚಿಸುತ್ತಿದ್ದರು. ಭಜನೆ ನಡೆಯುವಲ್ಲಿ ಸಹ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಯಾರಲ್ಲೂ ನನಗೆ ಭಕ್ತಿ ಕಾಣಿಸಲೇ ಇಲ್ಲ.ಇನ್ನು ಮುಂದೆ ನಾನೆಂದೂ ಆ ದೇವಸ್ಥಾನಕ್ಕೆ ಹೋಗಲಾರೆ.

ತಂದೆ: (ಸ್ವಲ್ಪ ಹೊತ್ತು ಮೌನವಾಗಿದ್ದು) ಸರಿ.. ನೀನು ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ನನ್ನದೊಂದು ಸಣ್ಣ ಕೋರಿಕೆ ನೆರವೇರಿಸುತ್ತೀಯಾ..?

ಮಗಳು:
ಖಂಡಿತಾ ಅಪ್ಪಾ… ನಿಮ್ಮ ಮಾತನ್ನು ನಾನು ಯಾವಾಗಲೂ ಇಲ್ಲ ಎಂದಿಲ್ಲ. ಹೇಳಿ ಏನು ಮಾಡಬೇಕು…

ತಂದೆ:
ನಾಳೆ ದೇವಸ್ಥಾನಕ್ಕೆ ಹೋಗುವಾಗ ಒಂದು ಗಾಜಿನ ಗ್ಲಾಸಿನ ತುಂಬ ನೀರು ತೆಗೆದುಕೊಂಡು ಹೋಗಿ, ಮೂರೇ ಮೂರು ಪ್ರದಕ್ಷಿಣೆ ಮಾಡಿ ಬಾ..
ಆದರೆ ಒಂದು ಸೂಚನೆ…ನಿನ್ನ ಲೋಟದಿಂದ ಒಂದೇ ಒಂದು ಹನಿ ನೀರು ಕೂಡಾ ಕೆಳಗೆ ಚೆಲ್ಲಬಾರದು. ಈ ಕೆಲಸ ಮಾಡುತ್ತೀಯಾ…….

ಮಗಳು:
ಹಾಗೆಯೇ ಆಗಲಿ. ಖಂಡಿತಾ ತರುತ್ತೇನೆ ನಿಮಗಾಗಿ ಎಂದಳು. ಮಾರನೇ ದಿನ ಒಂದು ಲೋಟ ತುಂಬಾ ನೀರು ತೆಗೆದುಕೊಂಡು ಹೊರಟಳು.. ಮೂರು ಗಂಟೆಗಳ ಬಳಿಕ ಮನೆಗೆ ನೀರು ತುಂಬಿದ ಲೋಟದೊಂದಿಗೆ ಹಿಂತಿರುಗಿದಳು..

ಮಗಳು:
ತಗೋ ಅಪ್ಪಾ…ನಾನು ದೇವಸ್ಥಾನಕ್ಕೆ ಹೋಗಿ ನೀವು ಹೇಳಿದ ರೀತಿ ಮೂರು ಪ್ರದಕ್ಷಿಣೆ ಪೂರ್ಣಗೊಳಿಸಿ ಬಂದೆ. ಒಂದೇ ಒಂದು ಹನಿ ನೀರು ಸಹ ಚೆಲ್ಲಲಿಲ್ಲ…

ಆಗ ತಂದೆ ಆ ಮಗಳಿಗೆ ಮೂರು ಪ್ರಶ್ನೆಗಳನ್ನು ಕೇಳಿದರು.

  1. ನೀನು ಪ್ರದಕ್ಷಿಣೆ ಮಾಡುತ್ತಿದ್ದಾಗ ಎಷ್ಟು ಮಂದಿ ತಮ್ಮ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು.?
  2. ಎಷ್ಟು ಮಂದಿ ಅನಗತ್ಯ ವಿಚಾರಗಳನ್ನು ದೇವಸ್ಥಾನದಲ್ಲಿ ಚರ್ಚಿಸುತ್ತಿದ್ದರು?
  3. ಎಷ್ಟು ಮಂದಿ ಸ್ವಲ್ಪವೂ ಭಕ್ತಿ ಇಲ್ಲದೇ ನಡೆದುಕೊಂಡರು?

ಮಗಳು: ಅದನ್ನು ನಾನು ಹೇಗೆ ಹೇಳಲು ಸಾಧ್ಯ ಅಪ್ಪಾ.. ನನ್ನ ದೃಷ್ಟಿಯೆಲ್ಲಾ ಲೋಟದ ಕಡೆಗಿತ್ತು, ಒಂದೇ ಒಂದು ಹನಿ ನೀರೂ ಚೆಲ್ಲದಂತೆ ಎಚ್ಚರ ವಹಿಸಿದ್ದೆ, ನನ್ನ ಗಮನ ಅದರ ಮೇಲೆಯೇ ಇತ್ತು…

ತಂದೆ:
ಇದೇನಮ್ಮಾ ನಾನು ಹೇಳಬೇಕೆಂದುಕೊಂಡಿದ್ದು. ನೀನು ದೇವಸ್ಥಾನಕ್ಕೆ ಹೋದಾಗ ನಿನ್ನ ದೃಷ್ಟಿ ಭಗವಂತನ ಮೇಲೆ, ನಿನ್ನ ಧ್ಯಾನ ಅವನ ಗುಣಗಾನದ ಚಿಂತನೆಯ ಮೇಲೆ ಇರಬೇಕು. ಆಗ ನೀನು
ಅಂತರ್ಮುಖಿಯಾಗಿ ಭಗವಂತನನ್ನು ಹಾಗೂ ಅವನ ಪೂಣಾ೯ನುಗ್ರಹವನ್ನು ಪಡೆಯಬಲ್ಲೆ.. ಜೀವನ ವೃದ್ಧಿಗೊಳ್ಳಲು ಈ ವಿಧವಾದ ಏಕಾಗ್ರತೆ ಸಾಧಿಸಬೇಕು.
ನಮ್ಮ ಗಮನ ಯಾವಾಗಲೂ ನಾವು ಮಾಡಬೇಕಾದ ಕೆಲಸದ ಮೇಲೆ ಕೆಂದ್ರೀಕೃತವಾಗಿರಬೇಕೇ ಹೊರತು ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಅಲ್ಲ

ಮಗಳು: ತುಂಬಾ ಧನ್ಯವಾದ ಅಪ್ಪ. ತುಂಬಾ ಅರ್ಥಗರ್ಭಿತವಾದ ವಿಚಾರಗಳನ್ನು ತಿಳಿಸಿದಿರಿ

Leave a Reply

Your email address will not be published. Required fields are marked *