ನೀಟ್ ಪರೀಕ್ಷೆ ವಂಚಿತರಿಗೆ ಮತ್ತೆ ಅವಕಾಶ: ಅಧಿಕೃತವಾಗಿ ಪ್ರಕಟಿಸಿದ ಕೇಂದ್ರ ಸರ್ಕಾರ

ಪರೀಕ್ಷಾ ಕೇಂದ್ರದ ಧಿಡೀರ್ ಬದಲಾವಣೆ,ಭಾರಿ ವಿಳಂಬದಿಂದ ಅವಧಿ ಮೀರಿ ಬೆಂಗಳೂರಿಗೆ ಆಗಮಿಸಿದ್ದ ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿದ್ದ ನೂರಾರು ನೀಟ್ ಪರೀಕ್ಷೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಆಗದೆ ಅತಿಯಾದ ಆತಂಕದಲ್ಲಿದ್ದರು.ಈಗ ಅದು ದೂರಾಗಿದೆ. ಮತ್ತೊಮ್ಮೆ ಪರೀಕ್ಷೆ ಬರೆಯಲು ಈ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದ್ದು ಇದು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೆಮ್ಮದಿ ಮೂಡಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ದೇಕರ್ ಅವರು ವಂಚಿತ ವಿದ್ಯಾರ್ಥಿಗಳು ಮತ್ತೆ ನೀಟ್ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುವುದು ಎಂದು ಟ್ವಿಟರ್ ಮೂಲಕ ಪ್ರಕಟಿಸಿದ್ದಾರೆ.ಆದರೆ ಪರೀಕ್ಷೆ ದಿನಾಂಕ ಪ್ರಕಟಿಸಿಲ್ಲ.

ರೈಲು ವಿಳಂಬ ಹಾಗೂ ಇದ್ದಕ್ಕಿದ್ದ ಹಾಗೇ ಯಾವುದೇ ಮಾಹಿತಿಯನ್ನು ನೀಡದೆ 35 ಕಿ.ಮೀ ದೂರದ ಮತ್ತೊಂದು ಪರೀಕ್ಷಾ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿತ್ತು.ಬೆಂಗಳೂರಿನ ಸಂಚಾರಿ ವ್ಯವಸ್ಥೆ ಯಲ್ಲಿ ಈ ದೂರ ಕ್ರಮಿಸಲು 1 ರಿಂದ 1.30 ಗಂಟೆ ಬೇಕಾಗುತ್ತದೆ.

ಈ ಕಾರಣದಿಂದ ಪರಿಕ್ಷಾರ್ಥಿಗಳಿಗೆ ತೀವ್ರ ತೊಂದರೆ ಆಗಿತ್ತು.
ಕೇಂದ್ರ ಸಚಿವ ಸದಾನಂದಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಂಚಿತರಿಗೆ ಮತ್ತೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.

Leave a Reply

Your email address will not be published. Required fields are marked *