ಕಾವ್ಯಮಿಡಿತ: ವಾರದ ಕವಿತೆ | ಓಂ ನಮಃ ಶಿವಾಯ | ಶಿವಾನಂದ್ ಕರೂರ್ ಮಠ್
ಜನಮಿಡಿತ ಪತ್ರಿಕೆಯು ಹೊಸದಾದ ಅಂಕಣವೊಂದನ್ನು ಆರಂಭಿಸಿದ್ದು ಸ್ಪರ್ಧೆಯಲ್ಲಿ ವಿಜೇತ ಕವಿತೆಗಳಲ್ಲಿ ಒಂದು ಕವಿತೆಯನ್ನ ವಾರದ ಕವಿತೆಯಾಗಿ ಆಯ್ಕೆ ಮಾಡಿ ಈ ಅಂಕಣದಲ್ಲಿ ಪ್ರಕಟಿಸಲು ನಿರ್ಧರಿಸಿದೆ.
ಈ ವಾರದ ವಿಜೇತ ಕವಿತೆ – ಓಂ ನಮಃ ಶಿವಾಯ
ಓಂ ನಮಃ ಶಿವಾಯ
ನಿರಾಕಾರ ಲಯಕಾರ ನೀನೆ ಶಿವ ಶಂಭುವೆ
ಋಗ್ವೇದದಿ ರುದ್ರನಾಗಿ ತ್ರಿಮೂರ್ತಿಗಳಲಿ ಒಬ್ಬನಾಗಿಯೆ
ಆದಿಯೋಗಿ ಮಹಾಜ್ಞಾನಿ ಭಸ್ಮಧರಿಪ ಬಿಲ್ವ ಪ್ರಿಯನೆ
ಸಪ್ತಋಷಿಗಳಿಗೆ ಯೋಗವೆರೆದ ಮೊದಲ ಗುರುವು ನೀನೆ
ಸರ್ಪಧರಿಪ ಚಂದ್ರನೊಳಪಿನವ ನಮ್ಮ ಶಿವ,
ಜಡೆಯೊಳಗೆ ಜೀವ ಜಲಧಾರೆ ತೊಟ್ಟ ಗಂಗಾಭೃತನಿವ,
ತ್ರಿನೇತ್ರ ತ್ರಿಶೂಲ ತ್ರಿದಳದಿ ಶೋಭಿತ ಶಿವಶಂಕರ,
ಲೋಕದ ಕಲ್ಯಾಣಕೆಲ್ಲೆಡೆ ನಿಲ್ಲೋ ಮೃತ್ಯುಗೆದ್ದ ಮೃತ್ಯ0ಜಯ,
ಮನಗೆದ್ದ ತವಸಿಗರಿಗೆ ಬೇಡಿದೊರವ ನೀಡುವ
ಅಸುರ ರಾಜ ರಾವಣನಿಗೆ ಆತ್ಮವನ್ನೆ ಕೊಟ್ಟವ
ನೃತ್ಯಪ್ರಿಯ ನಟರಾಜ ಕೈಲಾಸ ಪಾಲಕ
ನಿರಹಂಕಾರ ಸುಜ್ಞಾನಿ, ಅಂಧಕಾರ ಪ್ರತಿನಿಧಿಪ
ಸತಿಯು ಪಾರ್ವತಿಯು ಪರಶಿವನ ಪತ್ನಿಯು
ನಾಡ ಜನರ ಕಾಯೋ
ನವ ದುರ್ಗಾಪರಮೇಶ್ವರಿಯು
ಸುಬ್ರಹ್ಮಣ್ಯ ಗಣಪರು ಸಂಪ್ರೀತಿ ಪುತ್ರರು
ನಂದೀಶನಲಿ ನೆಲೆಸಿಹ ಮುಕ್ಕೋಟಿ ದೇವರಿವರು
ಭಕ್ತರ ಇಷ್ಟಾರ್ಥಗಳ ಸಿದ್ದಿರೂಪ ಸತ್ಯ ಶಿವನು
ಬ್ರಹ್ಮತಂದ ಕೇತಕಿ ಸುಮದ ಸತ್ಯವರಿತ ಜ್ಞಾನಿಯು
ಭಗೀರಥನ ತಪಸ್ಸಿಗೆ ಇಳೆಗೆ ಇಳಿಸಿದ ಗಂಗೆಯನು
ರುದ್ರಾಕ್ಷಿ ಮಾಲೆಧರಿಪ ರುದ್ರಭುವಿಯ ಅಘೋರಿಯು
ನಭೋಮಂಡಲ ನಾಶಮಾಡೊ ಹಾಲಾಹಲ ನುಂಗಿದ
ಬೇಡರ ಕಣ್ಣಪ್ಪನ ಹಸಿವ ನೀಗಿ ಅಭಯವನಿಟ್ಟ
ಭಕ್ತಕುಲ ತಮೋಗುಣಗಳ ಜಾಗೃತಿಸೋ ಮಹದೇವನಿವನು
ಶಿವಕಾಣದ ಕವಿ ನಿಜಕೂ ಅವನೇ ಸ್ವತಃ ಕುರುಡನು
ರುದ್ರ ನಮಕ ಚಮಕಗಳು ಉಸಿರಾಟಕೆ ಶಕ್ತಿಯು
ಶಿವರಾತ್ರಿಯ ಜಾಗರಣೆ ಜಾಗೃತಿಗೆ ಸಾಕ್ಷಿಯು
ಶಿವ ಪಂಚಾಕ್ಷರಿಮಂತ್ರ ‘ಓಂ ನಮಃ ಶಿವಾಯ’ವು
ಅದ ಪಠಿಸುವ ಭಕ್ತನ ಅಂತರಾತ್ಮ ಶುದ್ಧಿಯು.
ರಚನೆ,
ಶಿವಾನಂದ್ ಕರೂರ್ ಮಠ್
ಶಿಕ್ಷಕರು,
ಶ್ರೀ ಸೋಮೇಶ್ವರ ವಿದ್ಯಾಲಯ,
ದಾವಣಗೆರೆ.
ಕವನ ಮತ್ತು ಲೇಖನಗಳಿಗೆ ಆಹ್ವಾನ
ಪ್ರತಿ ಮಂಗಳವಾರ ಜನಮಿಡಿತ ದಿನಪತ್ರಿಕೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪುಟ ಕಾವ್ಯಮಿದಿತ ಪ್ರಕತಿಸುತಲಿದ್ದು, ಆಸಕ್ತರು ತಮ್ಮ ಕವನಗಳನ್ನು ಹಾಗೂ ಲೇಖನಗಳನ್ನು ನಮ್ಮ Facebook page Janamiditha ಕ್ಕೆ ಅಥವಾ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬಹುದು.
Mail: janamiditha@gmail.com