ಕರ್ನಾಟಕದಲ್ಲಿ ಒಂದು ಆರ್ ಟಿ ಓ ಹುದ್ದೆಗೆ 50ಲಕ್ಷ ರೂ ಲಂಚ…..!
ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಆರ್ ಟಿ ಓ ನೇಮಕಾತಿ ಸಂದರ್ಭದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಅಂದು ಸಾರಿಗೆ ಸಚಿವರಾಗಿದ್ದವರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
2015ರಲ್ಲಿ ರಾಜ್ಯದ ವಿವಿಧ ಕಡೆ ಆರ್ ಟಿ ಓ ನೇಮಕಕ್ಕೆ ನೋಟಿಫಿಕೇಶನ್ ಹೊರಡಿಸಲಾಗಿತ್ತಾದರೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅಂದಿನ ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ ತಮ್ಮ ಸಂಬಂಧಿಕರು ಹಾಗೂ ಕೆಲ ಅಧಿಕಾರಿಗಳ ಮಕ್ಕಳಿಗೆ 50ಕ್ಕೂ ಹೆಚ್ಚು ಹುದ್ದೆಗಳಲ್ಲಿ ಅವಕಾಶ ಕಲ್ಪಿಸಿದ್ದಾರೆ, ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಪರೀಕ್ಷೆಗಾಗಿ ಇದ್ದ 400 ಅಂಕಗಳಲ್ಲಿ 20 ಅಂಕ ಪಡೆದಿದ್ದರು ಆರ್ ಟಿ ಓ ದಲ್ಲಿ ತಲಾ 50 ಲಕ್ಷ ರು ಲಂಚ ಕೊಟ್ಟು ಕೆಲ ಅಭ್ಯರ್ಥಿಗಳು ಉದ್ಯೋಗ ಪಡೆದಿರುವುದು ಮಾಹಿತಿಯಲ್ಲಿ ಬಹಿರಂಗಗೊಂಡಿದೆ.ಅಂದಿನ ಸಾರಿಗೆ ಸಚಿವ ತಮ್ಮಣ್ಣ ಜೊತೆ ಸಾರಿಗೆ ಆಯುಕ್ತರು ಹಾಗೂ ಕೆ ಪಿ ಎಸ್ ಸಿ ಕಾರ್ಯದರ್ಶಿಯೂ ಸಹ ಸಾತ್ ನೀಡಿದ್ದಾರೆ.
ಕನ್ನಡ ಒಕ್ಕೂಟದ ನಾಗೇಶ್ ಎಂಬವರು ಇದೀಗ ದೂರು ದಾಖಲಿಸಿದ್ದು, ಅಕ್ರಮ ವಿಧಾನದಿಂದ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಹಾಗೂ ಆಯ್ಕೆಯಾಗದ ಅಭ್ಯರ್ಥಿಗಳಿಗೆ ಕರೆಮಾಡಿ ಎಲ್ಲಾ ವಿಚಾರಗಳನ್ನು ಕೇಳಿದ್ದು ಇದೆಲ್ಲವೂ ಆಡಿಯೋದಲ್ಲಿ ರೆಕಾರ್ಡ್ ಆಗಿದೆ.
ಒಟ್ಟಾರೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರೂ ತಮ್ಮ ಅವಧಿಯ ಸಾರಿಗೆ ಸಚಿವರೊಬ್ಬರ ಇಂತಹ ಬಹು ದೊಡ್ಡ ಹಗರಣವೊಂದು ಬೆಳಕಿಗೆ ಬರುವ ಮೂಲಕ ಮತ್ತೆ ಪೇಚಿಗೆ ಸಿಲುಕಿಕೊಂಡಿದ್ದಾರೆ.