ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದೇ ತೀರುತ್ತದೆ: ಆಗಸ್ಟ್ ವರೆಗೆ ಇತರೆ ಶಾಲೆಗಳನ್ನು ತೆರೆಯುವುದಿಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ
ಉಡುಪಿ, ಜೂ.9- ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡುವ ಯಾವುದೇ ಆಲೋಚನೆ ಇಲ್ಲ ಎಂದು ಸ್ಪಷ್ಟ ಪಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಈ ಸಂಬಂಧ ಊಹಾಪೋಹ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟವಾಗಿದ್ದು, ನಿಗಧಿತ ದಿನಾಂಕದಂತೆ ಪರೀಕ್ಷೆಗಳು ನಡೆದೇ ತೀರುತ್ತವೆ ಎಂದರು.
![](https://janamiditha.com/wp-content/uploads/2020/06/SSLC-Exam-800x445.jpg)
ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮಲ್ಲೂ ಏನಾಗುತ್ತದೋ ಎಂಬ ಗೊಂದಲ ಉಂಟು ಮಾಡಲು ಕೆಲವರು ಯತ್ನಿಸಿದ್ದಾರೆ. ಆದರೆ ರಾಜ್ಯದಲ್ಲಿ ಮಕ್ಕಳ ರಕ್ಷಣೆಗಾಗಿ ಎಲ್ಲಾ ಕ್ರಮಗಳನ್ನೂ ಕೈಗೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿಯೇ ತೀರುತ್ತೇವೆ. ಯಾವುದೇ ಕಾರಣಕ್ಕೂ ಪರೀಕ್ಷೆ ರದ್ದಾಗುವುದಿಲ್ಲ ಎಂದರು.
ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ಗೊಂದಲಕ್ಕೊಳಗಾಗುವುದು ಬೇಡ ಎಂದು ಅವರು ಮನವಿ ಮಾಡಿದರು.
![](https://janamiditha.com/wp-content/uploads/2020/06/sureshkumar.jpg)
ಆನ್ ಲೈನ್ ಶಿಕ್ಷಣ ಸೂಕ್ತ ಕ್ರಮದ ಬಗ್ಗೆ ಬುಧವಾರ ವಿಸ್ತ್ರತ ಚರ್ಚೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದರು.
ಕೇಂದ್ರ ಸರ್ಕಾರ ಸೂಚಿಸಿರುವಂತೆ ಇತರೆ ಶಾಲೆ, ಕಾಲೇಜುಗಳನ್ನು ಆಗಸ್ಟ್ ನಂತರವೇ ಆರಂಭಿಸಲಾಗುವುದು ಎಂದು ಅವರು, ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು.